ಇಂದು ಭಾರತ್ ಬಂದ್!
ಗೆಲ್ಲಲಿ ಕ್ರೀಡೆ
ಇಂದು ಅಕ್ಷರಶ: ಭಾರತ ದೇಶ ಅಘೋಷಿತ ಬಂದ್ ಆಚರಿಸಲಿದೆ. ಕ್ರಿಕೆಟ್ ಎನ್ನುವ ಮೂರ್ಖರ ಆಟ ಭಾರತೀಯರನ್ನು ಯಾವ ರೀತಿಯಲ್ಲಿ ಹಿಡಿದಿಟ್ಟಿದೆ ಎನ್ನುವುದಕ್ಕೆ ಇದೊಂದೇ ಸಾಕ್ಷಿ ಸಾಕು. ಭಾರತ-ಪಾಕ್ ಸೆಮಿ ಫೈನಲ್ ಪಂದ್ಯ ನಡೆಯುವ ಮೊಹಾಲಿ ಯಂತೂ ಎರಡು ದಿನಗಳ ಹಿಂದೆಯೇ ರಜೆ ಘೋಷಿಸಿದ್ದರೆ, ಇಂದು ಭಾರತದ ಪ್ರತಿಯೊಂದು ಗಲ್ಲಿಯೂ ಸ್ಥಬ್ದ ವಾಗಲಿದೆ. ರೈಲ್ವೇ ಸ್ಟೇಷನ್ನಿನ ಹಮಾ ಲಿಯಿಂದ ಹಿಡಿದು ಕಾರ್ಪೊರೇಟ್ ಕಂಪೆನಿಯ ತನಕ ಪ್ರತಿಯೊಬ್ಬರೂ ರಜೆ ಘೋಷಿಸಿಬಿಟ್ಟಿದ್ದಾರೆ. ಯಾರೋ ಗೆಲ್ಲುತ್ತಾರೆ, ಇನ್ಯಾರೋ ಸೋಲುತ್ತಾರೆ. ಇದು ಕ್ರೀಡೆಯ ಅಲಿಖಿತ ನಿಯಮ. ಆದರೆ ಕ್ರಿಕೆಟ್ ಎನ್ನುವ ಆಟ ಇಲ್ಲಿ ಎಲ್ಲ ಆಟವನ್ನೂ ಮೀರಿದ್ದು. ಇಲ್ಲಿ ಕ್ರಿಕೆಟ್ ಎನ್ನುವುದು ಆಟವಲ್ಲ ಅದೊಂದು ಧರ್ಮ. ಕ್ರೀಡೆಗೆ ಯಾವತ್ತಿಗೂ ಧರ್ಮಾತೀತ. ಇಲ್ಲಿ ಸಚಿನ್ ಎಷ್ಟರ ಮಟ್ಟಿಗೆ ಫೇಮಸ್ಸೋ ಅಷ್ಟೇ ಯೂಸುಫ್ ಪಠಾಣ್ನ ಬ್ಯಾಟಿಂಗ್, ಜಹೀರ್ಖಾನ್ನ ಬೌಲಿಂಗ್ ಕೂಡಾ ಫೇಮಸ್ಸು. ಕ್ರಿಕೆಟ್ನಂಥ ಕ್ರೀಡೆಗೆ ಎರಡೂ ದೇಶಗಳನ್ನು ಹತ್ತಿರ ತರುವಂಥ ತಾಕತ್ತು ಇದೆ ಎಂದಾದರೆ ಅದು ಮಾನವೀಯ ಸಂಬಂಧಗಳನ್ನೂ ಮೀರಿದ್ದ ಸ್ಪೂರ್ತಿಯೊಂದಿದೆ ಎನ್ನುವುದು ಖಚಿತ.
ಭಾರತ ಹಾಗೂ ಪಾಕಿಸ್ತಾನದ ಮುಖಂಡರ ಮನವಿ ಕೂಡಾ ಇಷ್ಟೇ. ಇಂದು ನಡೆಯುತ್ತಿರುವುದು ಕೇವಲ ಕ್ರೀಡೆ ಮಾತ್ರ. ಇಲ್ಲಿ ಯಾರು ಸೋಲುತ್ತಾರೆ, ಯಾರು ಗೆಲ್ಲುತ್ತಾರೋ ಎನ್ನುವುದಕ್ಕಿಂತಲೂ ಕ್ರೀಡೆ ಗೆಲ್ಲಲಿ ಎನ್ನುವ ಹಾರೈಕೆ ನಿಜವಾದ ಕ್ರೀಡಾ ಪ್ರೇಮಿಗಳದ್ದು. ಕ್ರೀಡೆಯಿಂದ ಕೋಟಿ ಕೋಟಿ ಗಳಿಸುವ ಧೋನಿ, ಸೆಹವಾಗ್ನಂಥವರಿಗೆ ದಿನಬೆಳಗಾದರೆ ನಮ್ಮೂರ ಬೀದಿಯನ್ನು ಸ್ವಚ್ಛ ಮಾಡುವ ಜಾಡಮಾಲಿಯ ಪರಿಚಯ ಇಲ್ಲದಿರಬಹುದು. ಆದರೆ ಆ ಜಾಡಮಾಲಿಗೆ ಭಾರತದ ಹನ್ನೊಂದು ಮಂದಿ ಕ್ರಿಕೆಟಿಗರೂ ಗೊತ್ತು. ಒಂದೊ ತ್ತಿನ ಹೊಟ್ಟೆ ಕಟ್ಟಿಕೊಂಡು ದುಡಿಯುವ ಕೋಟ್ಯಂತರ ಜನ ಇಲ್ಲಿದ್ದಾರೆ. ಭಾರತದ ಅಸಲಿ ಮುಖವಿದು. ನಿಜವಾದ ದೇಶಪ್ರೇಮಗಳಿವರು. ಅದೇ ಸೋತರೂ, ಗೆದ್ದರೂ ಕೋಟಿ ಕೋಟಿಯನ್ನು ಜಾಹೀರಾತುಗಳಲ್ಲಿ ಸಂಪಾದಿಸಿ ಐಷಾರಾಮಿ ಬಂಗಲೆಗಳಲ್ಲಿ ಪವಡಿಸುವ ಕ್ರಿಕೆಟಿಗರಿಗೆ ಆಗುವ ನಷ್ಟ ಏನಿಲ್ಲ. ಆದರೆ ಲಾಭನಷ್ಟದ ಲೆಕ್ಕಾಚಾರ ಬಿಟ್ಟು ಭಾರತ ಗೆದ್ದಾಗ ಬೆವರು ಸುರಿಸಿದ ಕಾಸಿನಿಂದ ಎಲ್ಲರಿಗೂ ಸಿಹಿ ಹಂಚಿ ಹೊಟ್ಟೆಗಿಲ್ಲದಿದ್ದರೂ ಮನಸ್ಸು ತುಂಬಾ ಭಾರತ ಗೆದ್ದ ಖುಷಿಯನ್ನು ಅನುಭವಿಸುವ ಕ್ರಿಕೆಟ್ಟಿನ ಕರ್ಮಠ ಭಕ್ತನಿಗೆ ಜಯವಾಗಲಿ.
ಸ್ಥಬ್ದ...ನಿಶ್ಯಬ್ದ
ಕ್ರಿಕೆಟ್ ಬಗ್ಗೆ ಅತೀ ಅನ್ನಿಸುವಷ್ಟು ಹುಚ್ಚು ಹಿಡಿಸಿಕೊಂಡಿರುವ ಮಂಗಳೂರು ಹಾಗೂ ಆಸುಪಾಸಿನ ಊರುಗಳಲ್ಲಿ ಹೆಚ್ಚಿನ ಕೆಲಸಗಾರರು ರಜೆ ಹಾಕಿರುವುದು ಬೆಳಕಿಗೆ ಬಂದಿದೆ. ಭಾರತ-ಪಾಕಿಸ್ತಾನದ ಪಂದ್ಯಾಟಕ್ಕಂತೂ ಕೆಲವು ಕಡೆಗಳಲ್ಲಿ ಕಚೇರಿಗೇ ರಜೆ ಕೊಡಲಾಗಿದೆ. ಕನ್ಸ್ಟ್ರಕ್ಷನ್ ಕಾಮಗಾರಿ, ಮರದ ಕೆಲಸದ ಘಟಕಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ಹೆಚ್ಚಿನ ಕಾರ್ಮಿಕರು ಮೊನ್ನೆಯಿಂದಲೇ ರಜೆ ಹಾಕುತ್ತಿದ್ದು ಇಂದು ಕೆಲವು ಕಡೆ ಕಾರ್ಮಿರಿಲ್ಲದ ಕಾರಣಕ್ಕೆ ಸಂಪೂರ್ಣ ರಜೆ ಘೋಷಿಸಲಾಗಿದೆಯಂತೆ. ನಗರದ ಬ್ಯಾಂಕಿಂಗ್, ವಿಮಾ ಕಚೇರಿಗಳಲ್ಲಿ, ಸೇವಾ ಕಚೇರಿಗಳಲ್ಲಿ ಗ್ರಾಹಕರೇ ಕಂಡು ಬರುತ್ತಿಲ್ಲ. ಇನ್ನೂ ಕೆಲವು ಕಡೆ ಕಾರ್ಮಿಕರು ರಜೆ ಹಾಕುವ ಬದಲು ಕಚೇರಿಗಳಲ್ಲೇ ಕ್ರಿಕೆಟ್ ನೋಡುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಕ್ರಿಕೆಟ್ನ ಹುಚ್ಚಿನಿಂದಾಗಿ ಸೂಪರ್ ಮಾರ್ಕೆಟ್, ಹೊಟೇಲ್, ಮಲ್ಟಿಫ್ಲೆಕ್ಸ್ಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ದಿನದ ಕೂಲಿಯನ್ನು ಅಂದೇ ಸಂಪಾದಿಸುವವರಿಗೂ ಭಾರತ-ಪಾಕ್ ಸೆಮಿಫೈನಲ್ ಪೆಟ್ಟುಕೊಟ್ಟಿದೆ. ಇಂಥದ್ದೇ ಸ್ಥಿತಿ ಇಲ್ಲಿ ಮಾತ್ರವಲ್ಲ ಭಾರತ-ಪಾಕಿಸ್ತಾನದಲ್ಲೂ ಇದೆಯಂತೆ.
ಸಚಿನ್ ನೂರನೇ ಶತಕಕ್ಕೆ ನೂರು ಕೋಟಿ ಬೆಟ್ಟಿಂಗ್
ಮುಂಬಯಿ: ಈಗಾಗಲೇ ಕೋಟ್ಯಂತರ ರೂಪಾಯಿ ಬೆಟ್ಟಿಂಗ್ ನಡೆದಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ತನ್ನ ನೂರನೇ ಶತಕ ಬಾರಿಸಲಿದ್ದಾರೆ ಎಂದು ಬುಕ್ಕಿಗಳು ನೂರು ಕೋಟಿ ರೂ. ಬೆಟ್ಟಿಂಗ್ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಮಧ್ಯಾಹ್ನ ಮೊಹಾಲಿಯಲ್ಲಿ ನಡೆಯಲಿರುವ ಪಂದ್ಯಕ್ಕೆ ಈಗಾಗಲೇ ಭಾರೀ ಬೆಟ್ಟಿಂಗ್ ನಡೆದಿದ್ದು, ವಿಶ್ವಕಪ್ನ ಅತೀ ದೊಡ್ಡ ಪಂದ್ಯಕ್ಕಾಗಿ ಈಗಾಗಲೇ ರಾಷ್ಟ್ರದಾದ್ಯಂತ ಬುಕ್ಕಿಗಳು ಬೆಟ್ಟಿಂಗ್ ಪಡೆಯುವುದರಲ್ಲಿ ವ್ಯಸ್ತರಾಗಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕಾಗಿ ಆರು ಸಾವಿರ ಕೋಟಿಗೂ ಹೆಚ್ಚು ಹಣ ಕೈಬದಲಾಯಿಸಿದೆ ಎಂದು ಬುಕ್ಕಿಗಳು ಹೇಳುತ್ತಿದ್ದಾರೆ. ಬೆಟ್ಟಿಂಗ್ನಲ್ಲಿ ಭಾರತಕ್ಕೆ ಈಗ ೬೨ ಪೈಸೆ, ಪಾಕಿಸ್ತಾನಕ್ಕೆ ೧.೫೮ ರೂ. ನಿಗದಿಯಾಗಿದೆ. ಭಾರತದ ಬ್ಯಾಟ್ಸ್ಮೆನ್ ಹಾಗೂ ಪಾಕಿಸ್ತಾನದ ಬೌಲರ್ಗಳ ಮಧ್ಯೆ ಭಾರೀ ಪೈಪೋಟಿ ನಡೆಯಲಿದ್ದು, ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದರೆ ೨೬೫-೨೭೫ ರನ್ ಮೊತ್ತ ದಾಖಲಿಸಲಿದೆ ಎಂದು ಬುಕ್ಕಿಗಳು ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ಒಂದು ವೇಳೆ ಪಾಕಿಸ್ತಾನ ಟಾಸ್ ಗೆದ್ದರೆ ಅದು ೩೧೦ರಿಂದ ೩೨೦ರ ಮೊತ್ತ ದಾಖಲಿಸಲಿದೆ ಎನ್ನುವುದು ಬುಕ್ಕಿಗಳ ಅಭಿಪ್ರಾಯ.
ಇದೇ ವೇಳೆ ಸಚಿನ್ ಪಾಕ್ ವಿರುದ್ಧ ತನ್ನ ನೂರನೇ ಶತಕ ದಾಖ ಲಿಸುವ ಬಗ್ಗೆ ಈಗಾಗಲೇ ಬೆಟ್ಟಿಂಗ್ ಆರಂಭವಾಗಿದ್ದು, ನೂರು ಕೋಟಿಗೂ ಹೆಚ್ಚು ಬೆಟ್ಟಿಂಗ್ ನಡೆಯಲಿದೆ ಎನ್ನಲಾಗುತ್ತಿದೆ. ಸಚಿನ್ ಶತಕ ಬಾರಿಸಿದರೆ ಭಾರತ ಫೈನಲಿಗೇರುವುದು ನಿಶ್ಚಿತ ವೆನ್ನಲಾಗಿದೆ. ಅಹ್ಮದಾಬಾದ್ನಲ್ಲಿ ಆಸ್ಟ್ರೇ ಲಿಯಾ ವಿರುದ್ಧ ಸಚಿನ್ ಮೂರಂಕೆ ಮೊತ್ತ ತಲುಪಲು ಸಾಧ್ಯವಾಗದ ಕಾರಣ ಮೊಹಾಲಿಯಲ್ಲಿ ಅವರಿಂದ ದೊಡ್ಡ ಮೊತ್ತದ ನಿರೀಕ್ಷೆಯನ್ನಿಡಲಾಗಿದೆ.
ಸಚಿನ್ ಶತಕ ಬಾರಿಸುತ್ತಾರೆಂದು ೪.೦೫ ರೂ. ಮತ್ತು ಅರ್ಧಶತಕ ಬಾರಿಸುತ್ತಾರೆಂದು ೧.೫೦ ರೂ. ಬುಕ್ಕಿಗಳು ನಿಗದಿ ಮಾಡಿದ್ದಾರೆ. ಪಂದ್ಯದ ಫಲಿತಾಂಶಕ್ಕಿಂತ ಸಚಿನ್ ಶತಕಕ್ಕೆ ಬೆಟ್ಟಿಂಗ್ ಹೆಚ್ಚು ಬರುತ್ತಿದೆ ಎನ್ನುತ್ತಾರೆ ಬುಕ್ಕಿಗಳು. ಅದೇ ರೀತಿ ಸೆಹವಾಗ್ ಮೇಲೆ ಈಗಾಗಲೇ ೬೦ ಕೋಟಿ, ಯುವರಾಜ್ ಸಿಂಗ್ ಮೇಲೆ ೫೫ ಮತ್ತು ಗಂಭೀರ್ ಮೇಲೆ ೫೦ ಕೋಟಿ ರೂ. ಬೆಟ್ಟಿಂಗ್ ನಡೆದಿದೆ. ಪಾಕಿಸ್ತಾನದ ಮೊಹಮ್ಮದ್ ಹಫೀಜ್ ಮೇಲೆ ೩೦ ಕೋಟಿ, ಕಮ್ರಾನ್ ಅಕ್ಮಲ್ ಮೇಲೆ ೩೫ ಕೋಟಿ, ಅಸದ್ ಸಫಿಕ್ ಮೇಲೆ ೨೫ ಕೋಟಿ ಮತ್ತು ಯೂನುಸ್ ಖಾನ್ ಮೇಲೆ ೨೦ ಕೋ. ರೂ. ಬೆಟ್ಟಿಂಗ್ ನಡೆದಿದೆ ಎಂದು ತಿಳಿದುಬಂದಿದೆ.
Posted by Jayakirana Morning Daily
on 01:05.
Filed under
.
You can follow any responses to this entry through the RSS 2.0